ಭೀಮನ ಮನಸು
ಮಗುವು ಹುಟ್ಟಿದ ಕೆಲವು ದಿನಗಳ ನಂತರ, ದೇವತಾ ಪೂಜೆಗೆಂದು ಶತಶೃಂಗದ ಬಳಿಯಿದ್ದ ದೇವಾಲಯವೊಂದಕ್ಕೆ ಹೊರಟಿದ್ದರು, ಅವರಿಬ್ಬರು; ಜೊತೆಗೆ ಆ ಪುಟ್ಟ ಕಂದಮ್ಮನೂ ಕೂಡ ಇತ್ತು.
ಹಾಗೆ ಅವರು ನಡೆದುಹೊರಟಿದ್ದಾಗ, ಅದಾವುದೊ ಗುಹೆಯೊಳಗಿದ್ದ ಹುಲಿಯೊಂದು ಅವಳ ಮೇಲೆರಗಲು ಹಾರಿಬಂತು. ಕ್ಷಣ ಮಾತ್ರದಲ್ಲಿ ಅವಳ ಪತಿಯು ಮೊನಚಾದ ಬಾಣಗಳನ್ನು ಪ್ರಯೋಗಿಸಿ, ಆ ಹುಲಿಯನ್ನು ಕೊಂದಿಕ್ಕಿದ. ಆದರೇನು, ಹುಲಿಯ ಭೀಷಣಾಕಾರವನ್ನು ಕಂಡು ಅವಳು ಹೆದರಿದ್ದರಿಂದ, ಆ ಗಲಿಬಿಲಿಯಲ್ಲಿ ಅವಳ ಕೈಯಲ್ಲಿದ್ದ ಮಗುವು ನೆಲಕ್ಕೆ ಬಿತ್ತು. ಇನ್ನೂ ಹತ್ತು ದಿನದ ಹಸುಗೂಸು! ಕಠಿಣವಾದ ಕಲ್ಲಿನ ಮೇಲೆ ಬಿದ್ದರೆ ಅದರ ಗತಿಯೇನಾಗಬೇಡ!?
ಆದರೆ, ಆದದ್ದೇ ಬೇರೆ. ಮಗುವು ನೆಲಕ್ಕೆ ಬಿದ್ದ ರಭಸಕ್ಕೆ ಆ ಕಲ್ಲು ಬಂಡೆಯೂ ಪುಡಿಪುಡಿಯಾಯಿತಂತೆ. ಮಗುವಿನ ದಾರ್ಢ್ಯ ಅಂಥದ್ದಿತ್ತು. ಅಂಥಾ ಮಗುವನ್ನು ಹೆತ್ತ ಕುಂತೀ ಪಾಂಡುವಿಗೆ ಅದೆಷ್ಟು ಸಂತಸವಾಗಿರಬೇಡ.! ಅಂಥಾ ಭೀಮಬಲದ ಮಗುವಿಗೆ ತಕ್ಕಂತೆ, ಭೀಮನೆಂದೇ ಹೆಸರಿಟ್ಟರು, ಅವರು.
ಪಂಪಭಾರತದಲ್ಲಿ, ಭೀಮನ ತುಂಟತನವನ್ನು ವರ್ಣಿಸುವ ಪದ್ಯವೊಂದಿದೆ : “ಮುನಿವನಮನೆ ಬಿಸುಟುವು ಮುಂ| ಮುನಿಯರ ಸೋಂಕಿಲೊಳೆ ಬಳೆದ ಸಿರಿಗಂಗಳ್ ಮು| ದ್ದಿನೊಳಡರ್ವ ಪಿಡಿವ ಗುರ್ದುವ| ಮನೆಗೆಳೆವನಿತರ್ಕಮಲಸಿ ಮರುದಾತ್ಮಜನೊಳ್”
ಪುಟ್ಟ ಮಕ್ಕಳ ಚೇಷ್ಟೆಗಳನ್ನು ಎಲ್ಲರೂ ನೋಡಿಯೇ ಇರುತ್ತೀರಿ. ಮನೆಯಲ್ಲಿ ಸಾಕು ನಾಯಿಗಳ ಕಿವಿ ಹಿಡಿದು ಎಳೆಯುವುದು, ಬೆಕ್ಕನ್ನೊ ನಾಯಿಮರಿಯನ್ನೊ ಯದ್ವಾತದ್ವಾ ಎತ್ತಿಕೊಂಡು ಕೊಂಡಾಟವಾಡುವುದು.. ಹೀಗೆ. ಭೀಮನಾದರೂ ಅಷ್ಟೆ: ಮುಂಚೆ ಆ ಆಶ್ರಮವಾಸಿಗಳ ಬಳಿ ಮುದ್ದಿನಿಂದ ಬೆಳೆದ ಸಿಂಹಗಳನ್ನು ಭೀಮನು ಮುದ್ದಿಸಿ ಎಳೆದಾಡುವುದು, ಗುದ್ದುವುದು, ಮನೆಗೆ ಎಳೆದುತರುವುದು — ಹೀಗೆಲ್ಲ ಮಾಡುತ್ತಿದ್ದನಂತೆ; ಇವನ ಕಾಟವನ್ನು ತಾಳಲಾರದೆ ಆ ಸಿಂಹಗಳು ಆ ಮುನಿವನವನ್ನೇ ಬಿಟ್ಟು ಓಡಿಹೋದುವಂತೆ. ಎಂತಹ ಮುದ್ದಾದ ಚಿತ್ರಣ!
ಪಾಂಡವರ ಪೈಕಿ ಭೀಮನ ಬಗೆಗೆ ನನಗೆ (ಕೆಲವು ಸಂದರ್ಭಗಳ ಹೊರತಾಗಿ) ಒಂದು ಬಗೆಯ ಪಕ್ಷಪಾತದ ಧೋರಣೆಯಿದೆ ಎಂದು ಎರಡನೆ ಮಾತಿಲ್ಲದೆ ಒಪ್ಪಿಕೊಳ್ಳುತ್ತೇನೆ. ಬಹುಶಃ ಹೆಚ್ಚಿನವರಿಗೂ ಹೀಗೇ ಅನಿಸಬಹುದು.
ಧರ್ಮರಾಯನದ್ದು ಸಾಮಾನ್ಯರಿಗೆಟುಕದಷ್ಟು, ಸಾಧ್ಯವಾಗದಷ್ಟು ಎತ್ತರದ ಆದರ್ಶ ಔದಾರ್ಯಗಳು. ಎಷ್ಟೊ ಸಂದರ್ಭಗಳಲ್ಲಿ ಅವನು ತೋರುವ ಸಂಯಮ, ಸ್ಥಿರಚಿತ್ತದ ವರ್ತನೆಗಳು ಅವನ ಬಗ್ಗೆ ಗೌರವ ಮೂಡಿಸುತ್ತವೆ, ನಿಜ. ಆದರೆ ಅವೇ ಕಾರಣಗಳಿಂದಲೆ ಆತ ನಮಗಿನ್ನಷ್ಟು ದೂರವಾಗುತ್ತಾನೇನೊ ಎನಿಸುತ್ತದೆ. ಮತ್ತೆ ಅರ್ಜುನ! ಅವನ ಕತೆಯೇ ಬೇರೆ. ಅತ್ತ ಅಣ್ಣನ ಆದರ್ಶಗಳೂ, ಇತ್ತ ಶ್ರೀಕೃಷ್ಣನ ಬುದ್ದಿಮಾತುಗಳು — ಇವುಗಳ ಪ್ರತಿಫಲನವೇ ಹೆಚ್ಚು ಕಾಣುತ್ತದೆ, ಆತನ ವ್ಯಕ್ತಿತ್ವದಲ್ಲಿ. ಅವನ ಬಗ್ಗೆ ಅಭಿಮಾನ ಮೂಡುವುದು ನಿಜವಾದರೂ…. ಇನ್ನು ಅವಳಿಗಳ ಬಗ್ಗೆ ನಮಗೆ ವಿವರವಾಗಿ ತಿಳಿಯುವುದು ಅಷ್ಟರಲ್ಲೆ ಇದೆ. ಪಾಪ!
ಆದರೆ ಈ ಭೀಮನಿದ್ದಾನಲ್ಲ, ಅವನ ಧೈರ್ಯ, ದಿಟ್ಟ ಮಾತು, ನೇರ ನಡೆ, ಅವನ ಸಿಟ್ಟು, ಮುಂಗೋಪ, ತಮ್ಮವರ ಬಗೆಗೆ ಅವನು ತೋರಿಸುವ ಪ್ರೀತಿ ಆದರಗಳೂ, ಕೆಲವೇ ಸಂದರ್ಭಗಳಲ್ಲಿ ವ್ಯಕ್ತವಾಗುವ ಅವನ ಮೃದುಮನಸ್ಸಿನ ನಡತೆ — ಇವೆಲ್ಲವೂ ಸೇರಿ, ಅವನು ನಮಗೆ ಬಹಳ ಪರಿಚಿತನಂತೆ, ನಾವು ತುಂಬ ಹತ್ತಿರದಿಂದ ಬಲ್ಲ ವ್ಯಕ್ತಿಯಂತೆ ಕಾಣುತ್ತಾನೆ. ಅದಕ್ಕೇ ಇಷ್ಟವಾಗುತ್ತಾನೆ. ಅಂತೆಯೇ, ಕೆಲವೊಮ್ಮೆ, ‘ಛೆ! ಭೀಮ ಹೀಗೆ ಮಾಡಬಾರದಿತ್ತು. ಭೀಮ ಹೀಗೆಲ್ಲ ಮಾತಾಡಬಾರದಿತ್ತು’ ಎನಿಸುವಂತಹ ಸಂದರ್ಭಗಳೂ ಇವೆ.
ಅಶ್ವಮೇಧ ಯಾಗ ನಡೆದಾದ ನಂತರದ ದಿನಗಳಲ್ಲಿ ಭೀಮನು ಧೃತರಾಷ್ಟ್ರನೊಡನೆ ಪ್ರತಿಕೂಲನಾಗಿ ವರ್ತಿಸುತ್ತಿದ್ದನಂತೆ. ಯಾರೂ ಇಲ್ಲದ ಹೊತ್ತಿನಲ್ಲಿ, ಧೃತರಾಷ್ಟ್ರನಿಗೆ ಮಾತ್ರ ಕೇಳಿಸುವಂತೆ ಕುಹಕವಾಡುವುದು, ಅಣಕಿಸುವುದು, ಹೀಗೆ. ಪಾಪ! ಅದರಿಂದ ಬೇಸತ್ತೊ ಏನೊ, ಕೊನೆಗೆ ಧೃತರಾಷ್ಟ್ರನು ವಾನಪ್ರಸ್ಥಕ್ಕೆ ಹೊರಡುವಂತಾಯ್ತು.
ಇಲ್ಲಿ, ಸಹಜವಾಗಿ “ಏನೆ ಅಂದ್ರೂ, ಭೀಮ ಹೀಗೆಲ್ಲ ಮಾಡಬಾರದಿತ್ತು. ಪಾಪ! ವಯಸ್ಸಾಗಿರೊ ದಂಪತಿಯ ಬಗ್ಗೆ ಹೀಗಾ ಅವನು ನಡಕೊಳ್ಳೋದು..” ಅನಿಸುತ್ತದೆ. ಆದರೆ, ಭೀಮನ ಮನಸ್ಸಿನಾಳವನ್ನೊಮ್ಮೆ ಇಣುಕಿದರೆ ಅದಕ್ಕೆ ಇದ್ದ ಕಾರಣಗಳಾದರೂ ಹೊಳೆದೀತು.
ಧೃತರಾಷ್ಟ್ರನು ತನ್ನ ಹಿರಿಮಗನ ಮೇಲಿದ್ದ ಕುರುಡುಪ್ರೇಮದಿಂದ, ಅವನ ದುಷ್ಕೃತ್ಯಗಳಿಗೆಲ್ಲ ಪ್ರತ್ಯಕ್ಷವಾಗಿಯೊ ಪರೋಕ್ಷವಾಗಿಯೋ ಬೆಂಬಲವಿತ್ತ; ಒಂದು ರೀತಿಯಲ್ಲಿ, ನಡೆದುದೆಲ್ಲಕ್ಕೂ ತಾನೂ ಕಾರಣವಾದ. ಧೃತರಾಷ್ಟ್ರನ ಉಪಸ್ಥಿತಿಯಲ್ಲೇ ನಡೆದ ಕಪಟದ್ಯೂತವೂ, ಅಲ್ಲಿ ದ್ರೌಪದಿಗಾದ ಅವಮಾನವೂ, ನಂತರದಲ್ಲಿ ಕೌರವರ ದೆಸೆಯಿಂದ ತಾವು ಅನುಭವಿಸಬೇಕಾದ ಕಷ್ಟಕೋಟಲೆಗಳಷ್ಟನ್ನೂ ಭೀಮನು ಹೇಗೆ ತಾನೆ ಮರೆತಾನು. ಅದರಲ್ಲೂ ದುರ್ಯೋಧನನ ಸಿಟ್ಟು ಹೆಚ್ಚಾಗಿ ಇದ್ದುದು ಭೀಮನ ಮೇಲೆಯೇ ಅಲ್ಲವೆ! ಅದಕ್ಕೆಂದೇ ತಾನೆ, ಹಗ್ಗ ಕಟ್ಟಿ ನೀರಿಗೆಸೆದು, ಕಾಳಸರ್ಪಗಳನ್ನು ಬಿಟ್ಟು, ವಿಷವೂಡಿಸಿ — ಭೀಮನನ್ನು ಕೊಲ್ಲುವ ಹವಣಿಕೆಯೆಲ್ಲ ಮಾಡಿದ್ದು..
ಅದಲ್ಲದೆ, ಯುದ್ಧವೆಲ್ಲ ಮುಗಿದ ನಂತರ, ಪಾಂಡವರು ಧೃತರಾಷ್ಟ್ರ ಗಾಂಧಾರಿಯರನ್ನು ಕಾಣಲು ಬಂದಾಗ, ಇದೇ ಧೃತರಾಷ್ಟ್ರನಲ್ಲವೆ — ಭೀಮನನ್ನು ಹೋಲುವ ಲೋಹದ ಬೊಂಬೆಯನ್ನು ಪುಡಿಪುಡಿಮಾಡಿದ್ದು. ಏನೇನೆಲ್ಲ ಆದಮೇಲೆಯೂ ಭೀಮನ ಬಗ್ಗೆ ಧೃತರಾಷ್ಟ್ರನಿಗಿದ್ದ ಕೋಪವು ಅಂಥದ್ದು. ಇದರ ನೆನಪೆಲ್ಲ ಭೀಮನ ಮನಸ್ಸಿನಿಂದ ಮಾಸಿತ್ತೆ?
ಆ ಎಲ್ಲದರ ಫಲವಾಗಿಯೆ ಭೀಮನು ಧೃತರಾಷ್ಟ್ರನ ಬಗ್ಗೆ ಹಾಗೆ ವರ್ತಿಸುತ್ತಿದ್ದನೊ ಏನೊ! ಆದರೂ, ಭೀಮನ ಮನಸ್ಸು ನಿಜಕ್ಕೂ ಅಷ್ಟು ಕಠಿಣವಾಗಿತ್ತೆ? ಹಾಗಿದ್ದರೆ ಧೃತರಾಷ್ಟ್ರ ಗಾಂಧಾರಿಯರು ಅರಣ್ಯವಾಸಕ್ಕೆ ಹೊರಟಾಗ, ಭೀಮನು ವಿಲಪಿಸಿದ್ದು ಯಾಕೆ? ಅವರ ಜೊತೆಗೆ ಕುಂತಿಯು ತಾನೂ ಹೊರಡುವೆನೆಂದಾಗ, ಭೀಮನು ಚಿಕ್ಕಮಗುವಿನಂತೆ ‘ಇಷ್ಟೆಲ್ಲ ಆದಮೇಲೆ ನಮ್ಮನ್ನು ನೀನು ಬಿಟ್ಟುಹೋಗುವುದು ಸರಿಯೇ?’ ಎಂದು ಹಟಮಾಡಿ ಕೇಳುತ್ತಾನೆ. ಕುಂತಿಗೆ ಗೊತ್ತು, ಭೀಮನ ಮನಸ್ಸು ಎಂಥದ್ದೆಂದು. ಅದಕ್ಕೇ ಅವಳು ಅವನನ್ನು ಅನುನಯದ ಮಾತುಗಳಿಂದ ಸುಮ್ಮನಾಗಿಸಿ, ಹೊರಡುತ್ತಾಳೆ. ಅವನನ್ನು ಸಮಾಧಾನಗೊಳಿಸುವಂತೆ ಯುಧಿಷ್ಠಿರನಿಗೂ ತಿಳಿಸುತ್ತಾಳೆ. ಇಲ್ಲೆಲ್ಲ ಭೀಮನ ವ್ಯಕ್ತಿತ್ವದಲ್ಲಿ ಕಾಣುವ ಬದಲಾವಣೆ, ವೈರುಧ್ಯಗಳು ನಮ್ಮನ್ನು ಚಕಿತಗೊಳಿಸುತ್ತವೆ.
ಲಾಕ್ಷಾಗೃಹದಿಂದ ತಪ್ಪಿಸಿಕೊಂಡು, ಪಾಂಡವರೂ ಕುಂತಿಯೂ ಕಾಡಿನಲ್ಲಿ ಬಲುದೂರ ನಡೆಯುತ್ತ ಸಾಗಿದರು. ನಡೆದೂ ನಡೆದೂ ಧರ್ಮರಾಯನ ಕಾಲುಗಳಿಂದ ಸುರಿದ ರಕ್ತದಿಂದ ಆ ದಾರಿಯು ಕೆಸರಾಯಿತಂತೆ. ಇನ್ನು ನಡೆಯಲಾಗದು ಎನಿಸಿದ್ದರಿಂದ, ನಕುಲ ಸಹದೇವರು “ಬೇಕಿದ್ರೆ ಆ ಕೌರವರು ನಮ್ಮನ್ನು ಹಿಡಿಯಲಿ, ಕೊಲ್ಲಲಿ (ಇನ್ನು ನಡೆಯಲು ನಮ್ಮಿಂದಾಗದು)” ಎಂದು ಹಲುಬಿದರಂತೆ. ಇನ್ನು ಕುಂತಿಯಾದರೊ, “ಉರಿಯ ಮನೆಯಲಿ ಸಾಯಲೀಯದೆ ಸೆರಗ ಹಿಡಿದೆಳೆತಂದು ಕೊಯ್ದನು ಕೊರಳನಕಟಾ, ಭೀಮನೇ ಹಗೆ” ಎಂದುಕೊಂಡಳಂತೆ. ಇದು ಕುಮಾರವ್ಯಾಸ ಭಾರತದಲ್ಲಿಯ ವರ್ಣನೆ.
ತನ್ನ ಅಣ್ಣತಮ್ಮಂದಿರೂ, ತಾಯಿಯೂ ನಡೆಯಲಾಗದೆ ಕಷ್ಟಪಡುತ್ತಿದ್ದುದನ್ನು ಕಂಡು, ಭೀಮನು ಅವರೆಲ್ಲರನ್ನೂ ತನ್ನ ಹೆಗಲಮೇಲೆ ಹೊತ್ತುಕೊಂಡು ತಾನೊಬ್ಬನೆ ಮುಂದೆ ನಡೆದನಂತೆ. ಮುಂದೆ, ಅವರನ್ನೆಲ್ಲ ಒಂದು ಮರದ ನೆರಳಡಿಯಲ್ಲಿಳುಹಿ, ಅವರಿಗೆಲ್ಲ ಕಮಲದೆಲೆಗಳ ದೊನ್ನೆಯಿಂದ ನೀರನ್ನು ತಂದು ಕೊಟ್ಟನಂತೆ.
ಇಷ್ಟೆಲ್ಲ ಆದರೂ ‘ಅಯ್ಯೊ, ನನಗೆ ಬಳಲಿಕೆಯಾಯ್ತು, ನಿದ್ದೆ ಬರ್ತಿದೆ, ನೀರಡಿಕೆಯಾಗ್ತಿದೆ…’ ಎನ್ನುವಂತಹ ಒಂದು ಮಾತನ್ನಾದರೂ ಆಡಿದನೆ, ಭೀಮ? — ಎನ್ನುತ್ತಾನೆ, ಕುಮಾರವ್ಯಾಸ.
ಅವರೆಲ್ಲರಿಗೂ ತಳಿರ ಹಾಸಿಗೆ ಸಿದ್ಧಪಡಿಸಿ, ಅವರನ್ನು ಮಲಗಲು ಹೇಳಿದ, ಭೀಮ. ಬಳಲಿಕೆಯ ಭಾರದಿಂದ ಅವರೆಲ್ಲ ಬೇಗನೆ ನಿದ್ದೆಗೆ ಜಾರಿದರು. ಅವರ ಕಂದಿದ ಮೊಗವನ್ನು ಕಂಡ ಭೀಮನು ಅಳಲುತೊಡಗಿದನಂತೆ. ತಾಯಿಯ ಕಾಲನ್ನೊತ್ತುತ್ತ, ಅಣ್ಣನ ಕಾಲು ನೀವುತ್ತ, ಉಳಿದ ತಮ್ಮಂದಿರ ಪಾದವನ್ನೊತ್ತುತ್ತ — ಅವರಿಗೊದಗಿದ ಕಷ್ಟವನ್ನೂ, ಹಿಂದೆ ಸಂಭವಿಸಿದ ಸಂಗತಿಗಳಷ್ಟನ್ನೂ ನೆನೆದು ದುಃಖಿಸಿದನಂತೆ, ಅವನು. ಈ ಸಂದರ್ಭದಲ್ಲಿಯ ಭೀಮನ ಚಿತ್ರಣವನ್ನು ಕಂಡು ‘ಅಯ್ಯೊ!’ ಎನಿಸದಿರದು.
ಎಷ್ಟೆಂದರೂ ಭೀಮನೂ ಅಷ್ಟು ದೂರ ನಡೆದೇ ಬಂದಿದ್ದನು. ಅದೂ, ಉಳಿದವರನ್ನೆಲ್ಲ ತನ್ನ ಹೆಗಲ ಮೇಲೆ ಹೊತ್ತು ತಂದಿದ್ದನು. ಹಾಗೆಂದಮೇಲೆ ಅವನಿಗೂ ನಿದ್ದೆ, ತೂಕಡಿಕೆ ಬಾರದಿರುತ್ತದೆಯೆ? ಹೇಗೆ ಅವನು ನಿದ್ದೆ ತೂಕಡಿಕೆಗಳನ್ನು ನಿಗ್ರಹಿಸಿ, ಎಚ್ಚರಾಗಿದ್ದನೆಂದು ಕುಮಾರವ್ಯಾಸನು ಒಂದು ಪದ್ಯದಲ್ಲಿ ಹೇಳುತ್ತಾನೆ :-
“ಔಕುವುದು ಬಲುನಿದ್ರೆ ನಿದ್ರೆಯ
ನೂಕುವನು ಕಣ್ಣೆವೆಗಳಲಿ ನಸು
ತೂಕಡಿಕೆ ತೋರಿದಡೆ ಮೈಗೆದರುವನು ಕೈಯೊಡನೆ
ಸೋಕುವುದು ಮೈಮರವೆ ಮರವೆಯ
ನೋಕರಿಸುವುದು ಚಿತ್ತವೃತ್ತಿ ನಿ
ರಾಕುಲಾಂತಃಕರಣನಾದನು ಬಳಿಕ ಕಲಿಭೀಮ”
ಜೂಜಿನಾಟದಲ್ಲಿ ಧರ್ಮರಾಯನು ತನ್ನ ಸರ್ವಸ್ವವನ್ನೂ ಸೋತ. ದುಶ್ಶಾಸನನು ದ್ರೌಪದಿಯನ್ನು ಸಭೆಗೆ ಎಳೆತಂದ. ದುರ್ಯೋಧನನು, ದ್ರೌಪದಿಯು ತನ್ನ ದಾಸಿಯಾಗಲಿ ಎಂದು ದುಷ್ಟವಾಕ್ಯಗಳನ್ನಾಡುತ್ತ, ಪಾಂಡವರನ್ನು ಕೆಣಕಿದ. ನಡೆದುದನ್ನು ಕಂಡು ಭೀಮಾರ್ಜುನರಿಬ್ಬರಿಗೂ ಕೋಪ ಬಂತು. ಆದರೆ, ಅರ್ಜುನನಿಗೆ ಅಣ್ಣನ ಮಾತು ದಾಟಲಾಗದೆಂಬ ಕಟ್ಟಳೆ!
ಭೀಮನಿಗಾದರೆ, ಇಷ್ಟೆಲ್ಲ ಆಗಿದ್ದಕ್ಕೆ ಧರ್ಮರಾಯನೂ ಕಾರಣವೆಂಬ ರೋಷವುಕ್ಕಿತು. ಆ ಭರದಲ್ಲಿ, ಅವನು ಸಹದೇವನನ್ನು ಕರೆದು “ಹೋಗು, ಬೇಗನೆ ಬೆಂಕಿಯನ್ನು ತಗೊಂಡು ಬಾ. ಈ ಯುಧಿಷ್ಠಿರನ ತೋಳುಗಳನ್ನು ಈ ಸಭೆಯೆದುರಿಗೇ ಸುಟ್ಟುಹಾಕ್ತೀನಿ” ಎಂದು ಘರ್ಜಿಸಿದ. ಆಗ ಅರ್ಜುನನೇ ಭೀಮನನ್ನು ಶಾಂತಗೊಳಿಸಿದ.
ಆ ನಂತರದಲ್ಲಿಯೂ ಅಷ್ಟೆ, ದುರ್ಯೋಧನನು ದ್ರೌಪದಿಯನ್ನು, ತನ್ನ ತೊಡೆಯನ್ನೇರಿ ಕೂರುವಂತೆ ಕರೆದಾಗ, ಭೀಮನ ಸಿಟ್ಟು ತಾರಕಕ್ಕೇರುತ್ತದೆ. ಆಗ, ದುಶ್ಶಾಸನನ ಎದೆಯನ್ನು ಬಗೆಯುವುದಾಗಿಯೂ, ದುರ್ಯೋಧನನ ಆ ತೊಡೆಗಳನ್ನೇ ಕೆಡವಿ ಕೊಲ್ಲುವುದಾಗಿ ಶಪಥ ಮಾಡುತ್ತಾನೆ, ಭೀಮ. ಇಲ್ಲೆಲ್ಲ, ಧರ್ಮಾದರ್ಶಗಳೆಂಬ ಯಾವ ಕಟ್ಟಳೆಗಳಿಗೂ ಸಿಗದ ಮಹಾರ್ಣವದಂತೆ ಉಕ್ಕೇರಿ ಕುದಿಯುತ್ತಾನೆ, ಭೀಮ. ಓದುಗರ ಮನಸ್ಸಾದರೂ ಭೀಮನಂತೆಯೇ ಚಿಂತಿಸುತ್ತದೆ, ಆ ಕ್ಷಣದ ಮಟ್ಟಿಗೆ.
ಮುಂದೆ ಇವರೆಲ್ಲ ಅರಣ್ಯವಾಸದಲ್ಲಿದ್ದಾಗಲೂ ಕೌರವರ ಉಪಟಳ ನಿಲ್ಲಲಿಲ್ಲ. ಆಗೊಮ್ಮೆ ಭೀಮನು ಸಿಟ್ಟಾಗಿ, ಧರ್ಮರಾಯನಿಗೆನ್ನುತ್ತಾನೆ: “ನಾನೂ ಅರ್ಜುನನೂ ಆ ಧಾರ್ತರಾಷ್ಟ್ರರನ್ನೆಲ್ಲ ಕೊಂದು, ರಾಜ್ಯವನ್ನು ನಮ್ಮ ವಶಕ್ಕೆ ತಗೋತೀವಿ. ನಿನಗೆ ಸಮಯಾತಿಕ್ರಮದ ಭಯವಿದ್ದರೆ, ನೀನು ಬೇಕಿದ್ರೆ ಈ ಕಾಡಿನಲ್ಲೇ ಹದಿಮೂರು ವರ್ಷಗಳೂ ಇದ್ದು, ಆಮೇಲೆ ಹಸ್ತಿನಾಪುರಕ್ಕೆ ಬಂದು ರಾಜ್ಯಾಭಿಷೇಕ ಮಾಡಿಸಿಕೊ” ಎನ್ನುತ್ತಾನೆ.
ಅಜ್ಞಾತವಾಸದ ಸಮಯದಲ್ಲಿ, ದ್ರೌಪದಿಯು ಕೀಚಕನಿಂದ ಒಮ್ಮೆ ಅವಮಾನಕ್ಕೊಳಗಾಗುತ್ತಾಳೆ. ಕೀಚಕನು ಎಲ್ಲರೆದುರೂ ಅವಳ ಜುಟ್ಟು ಹಿಡಿದೆಳದು, ಬೈದಾಡಿ ಅವಮಾನಿಸುತ್ತಾನೆ. ಅದನ್ನು ಕಂಡು ಭೀಮನ ಮನಸ್ಸು ಬೆಂಕಿಯಾಗುತ್ತದೆ. ಆದರೂ, ತನ್ನ ಸಿಟ್ಟನ್ನು ತೋರಿಸಿದರೆ ಅನರ್ಥವಾದೀತಲ್ಲ. ಅಜ್ಞಾತವಾಸದ ಕಟ್ಟಳೆಗೆ ಭಂಗವೊದಗುತ್ತದೆ! ಅದಕ್ಕೇ, ಅರಮನೆಯೆದುರಿನ ದೊಡ್ಡ ಮರವೊಂದನ್ನು ಹೊಡೆದುರುಳಿಸಿ ತನ್ನ ಸಿಟ್ಟನ್ನು ವ್ಯಕ್ತಪಡಿಸುತ್ತಾನೆ, ಭೀಮ.
ಮುಂದೆ ಹೇಗೂ ಕೀಚಕನನ್ನೂ ಉಪಕೀಚಕರನ್ನೂ ಕೊಂದಿಕ್ಕಿ, ತನ್ನ ಕೋಪವನ್ನು ಉಪಶಮನಗೊಳಿಸುತ್ತಾನೆ. ಕೀಚಕನನ್ನಾದರೂ ಹೇಗೆ ಹೊಸೆದುಹಾಕಿ ಕೊಂದಿರುತ್ತಾನೆಂದರೆ, ಯಾವುದೊ ಮೂಟೆಯಲ್ಲಿ ಮಾಂಸವನ್ನೆಲ್ಲ ತುರುಕಿಹಾಕಿದರೊ ಎಂಬಂತೆ ಕಾಣುತ್ತಿತ್ತಂತೆ — ಕೀಚಕನ ಹೆಣ. ಒಟ್ಟು ಸಭಾಪರ್ವದಲ್ಲಿ ದ್ರೌಪದಿಗಾದ ಅಪಮಾನಕ್ಕೆ, ಅವಳ ದುಃಖಕ್ಕೆ ಪ್ರತೀಕಾರ ತೀರಿಸುವುದು ಭೀಮನೇ.
ಇಷ್ಟೆಲ್ಲ ಆದರೂ, ಭೀಮನ ಮನಸ್ಸೂ ಅದೇಕೊ ಸಂಧಿಗೆ ಒಡಂಬಡುತ್ತದೆ. ಸಂಧಾನಕ್ಕೆಂದು ಕೃಷ್ಣನು ಹಸ್ತಿನಾವತಿಗೆ ಹೊರಟಾಗ, ಧರ್ಮರಾಯ, ಅರ್ಜುನರು ಅವನಿಗೆ ಸಂಧಿಯನ್ನು ಸಾಧಿಸುವಂತೆ ಹಲವಾರು ರೀತಿಯಲ್ಲಿ ಹೇಳುತ್ತಾರೆ. ಭೀಮನೂ ಹೇಳುತ್ತಾನೆ — ‘ಕೃಷ್ಣ! ದುರ್ಯೋಧನನು ಸ್ವಲ್ಪ ದುಡುಕು ಸ್ವಭಾವದವನು. ನನ್ನ ಮೇಲಿನ ದ್ವೇಷದಿಂದ ಅವನು ಸಂಧಿಮಾಡಿಕೊಳ್ಳಲು ಒಪ್ಪದೆ ಹೋಗಬಹುದು. ನೀನು ಶಾಂತವಾಗಿ ಅವನನ್ನು ಅನುನಯಿಸಿ, ಒಪ್ಪಿಸು’ ಎನ್ನುತ್ತಾನೆ.
ಆದರೂ ನಡೆದದ್ದು ಬೇರೆಯೇ. ಸಂಧಿಯೇ ಸಾಧ್ಯವಾಗುವುದಿದ್ದರೆ ಮಹಾಭಾರತದ ಕಥೆಯೇ ಬೇರೆ ತೆರನಾಗಿರುತ್ತಿತ್ತು, ಅಲ್ಲವೆ?
ಯುದ್ಧದಲ್ಲಿ ಕೌರವರ ಪೈಕಿ ಸಿಕ್ಕಸಿಕ್ಕವರನ್ನೆಲ್ಲ ಕೊಂದುಹಾಕಿದ, ಭೀಮ. ಆದರೂ, ಅವನ ಮುಖ್ಯ ಬೇಟೆಗಳೆಂದರೆ ದುಶ್ಶಾಸನ, ದುರ್ಯೋಧನರೇ. ದುಶ್ಶಾಸನನ ಎದೆ ಬಗೆದು ರಕ್ತಪಾನ ಮಾಡುವುದಾಗಿ ಪ್ರತೀಜ್ಞೆಯನ್ನೂ ಮಾಡಿದ್ದನಲ್ಲ.
ಅದೂ ನಡೆಯಿತು. ದುಶ್ಶಾಸನನನ್ನು ಅತಿ ಭೀಕರವಾಗಿ ಕೊಲ್ಲುತ್ತಾನೆ, ಭೀಮ. ಅವನ ಎದೆಯನ್ನು ಬಗೆದು, ಅಲ್ಲಿಂದ ಪುಟಿಯುತ್ತಿದ್ದ ಬಿಸಿರಕ್ತವನ್ನು ಕುಡಿಯುತ್ತ, “ಎಂತಹ ಜೇನೂ, ಕಬ್ಬಿನ ರಸವೂ ಇದರ ರುಚಿಗೆ ಸಾಟಿಯಲ್ಲ” ಎಂದು ಮನಸಾರೆ ಮೆಚ್ಚಿ ನುಡಿಯುತ್ತಾನೆ, ಭೀಮ.
ಭೀಮನ ವರ್ತನೆಯನ್ನೂ, ಆ ರೌದ್ರತೆಯನ್ನೂ ಕಂಡು ಎರಡೂ ಬಣದವರು ಗರಬಡಿದವರಂತೆ ನಿಂತಿದ್ದರು. ಭೀಮನು ಆ ಸಮಯಕ್ಕೆ ಅದೆಷ್ಟು ಮತ್ತನಾಗಿದ್ದನೆಂದರೆ, ‘ಸಾಧ್ಯವಿದ್ದರೆ ಈ ದುಶ್ಶಾಸನನನ್ನು ನನ್ನಿಂದ ಬಿಡಿಸಿಕೊಳ್ಳಿ’ ಎಂದು ಕೌರವ ವೀರರಿಗೂ, ಪಾಂಡವ ಸೈನ್ಯದವರಿಗೂ ಒಟ್ಟಿಗೆ ಸವಾಲು ಹಾಕುತ್ತಾನೆ. ಅಷ್ಟಕ್ಕೆ ನಿಲ್ಲದೆ, “ಏನಪ್ಪಾ ಅರ್ಜುನ! ಮೂರುಲೋಕದಲ್ಲೂ ನೀನು ಮಹಾ ಬಿಲ್ಲುಗಾರನೆಂಬ ಮಾತಿದೆ. ಅದನ್ನು ನಿರೂಪಿಸಿಕೊಳ್ಳುವಹಾಗಿದ್ದರೆ ಇವನನ್ನು ನನ್ನಿಂದ ಬಿಡಿಸಿಕೊ, ನೋಡೋಣ” ಎಂದು ಕಿಚಾಯಿಸುತ್ತಾನೆ.
ಈ ಸಂಭಾಷಣೆ ಬರಿ ಕುಮಾರವ್ಯಾಸ ಭಾರತದಲ್ಲಿ ಮಾತ್ರ ಇರುವಂತೆ ತೋರುತ್ತದೆ. ಮೂಲದಲ್ಲಿ ಈ ಸಂಭಾಷಣೆಯಿಲ್ಲ. ಆದರೆ, ಮೂಲ ಭಾರತದಲ್ಲಿಯೂ ದುಶ್ಶಾಸನ ವಧೆಯ ಹೊತ್ತಿಗೆ ಭೀಮನು ರುದ್ರಸದೃಶನಾಗೇ ವರ್ತಿಸುತ್ತಾನೆ. ಅಲ್ಲಿಯ ವರ್ಣನೆಯೂ ಇಷ್ಟೇ ಭೀಷಣವಾಗಿದೆ.
ಮುಂದೆ, ದುರ್ಯೋಧನನೊಡನೆ ಗದಾಯುದ್ಧ. ಕುರುಕ್ಷೇತ್ರ ಸಂಗ್ರಾಮದ ನಿರ್ಣಾಯಕ ಘಟ್ಟ.! ಯುಧಿಷ್ಠಿರನು ದುರ್ಯೋಧನನಿಗೆ “ನಮ್ಮೈವರಲ್ಲಿ ನೀನು ಯಾರೊಟ್ಟಿಗಾದರೂ ದ್ವಂದ್ವ ಯುದ್ಧ ಮಾಡಬಹುದು; ಆಳಿನ ಆಯ್ಕೆಯೂ ನಿನ್ನದೆ, ಅಸ್ತ್ರದ ಆಯ್ಕೆಯೂ ನಿನ್ನದೆ” ಎಂಬ ಆಮಂತ್ರಣವಿತ್ತ. ದುರ್ಯೋಧನನಿಗಾದರೂ ಇನ್ನಾರೊಟ್ಟಿಗೆ ಕಾದುವುದೂ ಇಷ್ಟವಿರಲಿಲ್ಲ. ಕೊನೆಗೆ ಭೀಮ-ದುರ್ಯೋಧನರ ಗದಾಯುದ್ಧವು ಮೊದಲಾಯಿತು. ಬಹಳ ದೀರ್ಘಕಾಲದ ಸೆಣೆಸಾಟದ ನಂತರ ಭೀಮನು ದುರ್ಯೋಧನನ ತೊಡೆ ಮುರಿಯುವಂತೆ ಘಾತಿಸಿ, ಕೆಡವಿದ. ಗೆಲುವು ಪಾಂಡವರ ಪಾಲಾಯಿತು.
ಆದರೆ ಭೀಮನ ಸಿಟ್ಟು ತೀರಿತೆ? ಮನಸ್ಸು ತೃಪ್ತವಾಯಿತೆ? ಇಲ್ಲ!
ಇಷ್ಟೆಲ್ಲ ಅನರ್ಥಗಳಿಗೆ ಕಾರಣವಾದ ಆ ಕುರುಸಾರ್ವಭೌಮನ ಕಿರೀಟವು ಹಾರಿಹೋಗುವಂತೆ, ಭೀಮನು ತನ್ನ ಎಡಗಾಲಿನಿಂದ ಝಾಡಿಸಿ, ದುರ್ಯೋಧನ ತಲೆಗೆ ಹೊಡೆದ; ದುರ್ಯೋಧನನ ಕಿರೀಟವು ಹಾರಿಬಿತ್ತು. ರನ್ನನ ‘ಸಾಹಸಭೀಮವಿಜಯ’ದಲ್ಲಿ ಬರುವಂತೆ — “ಭೀಮಸೇನನೊದೆದಂ ವಾಮಾಂಘ್ರಿಯಿಂ ರತ್ನಮಂಡಲ ರಶ್ಮಿ ಪ್ರಕಟಜ್ವಲನ್ಮಕುಟಮಂ ಕೌರವ್ಯರಾಜೇಂದ್ರನಾ”
ಈ ಸಂದರ್ಭದಲ್ಲಿ, ಭೀಮನ ವರ್ತನೆಯನ್ನು ಬಲರಾಮನು ಖಂಡಿಸುತ್ತಾನೆ. ಆದರೆ ಕೃಷ್ಣನು ಸೂಕ್ತ ಉತ್ತರದಿಂದ ಅವನನ್ನು ಸುಮ್ಮನಿರಿಸುತ್ತಾನೆ.
ಮುಂದೆ, ಮಲಗಿದ್ದ ವೀರರ ಮೇಲೆರಗಿ ಕೊಂದ ಅಶ್ವತ್ಥಾಮನನ್ನು ಹುಡುಕಿ, ಅವನನ್ನು ಕೊಲ್ಲಹೋಗುವುದೂ ಭೀಮನೇ.